ಕವಿತೆ
ಶೀರ್ಷಿಕೆ-ಹಸಿರು ನಮ್ಮ ಉಸಿರು
*************************
ಹಸಿರುಸಿರಲಿ ಜೀವಕೆ ಉಸಿರುದುಂಬಿದ ಮಡಿಲು
ಹಸಿವ ತಣಿಸುತ ಬೆಳೆಸುವ ಕಾಳಜಿಯ ಒಡಲು
ಧಮನಿಯೊಲಮೆ ಬಸಿದ ಎದೆಯ ಸುಧೆಯು
ನಿತ್ಯ ಸಲಹುವ ಧರೆಯ ಹಸಿರು ವನಸಿರಿಯು.,
ಚಿಗುರು ನಳನಳಿಸಿ ನಗಲು, ಹೊಮ್ಮುವ ಚೇತನ
ಹಸಿರುಟ್ಟ ಧರೆಯ ಸೊಬಗು ಚೆಲ್ಲಿದ ಆನಂದದೌತಣ
ಒಡಲ ಮಮತೆಯ ಮಡಿಲೊಳಗೆ ಸುಖದ ತಾಣ
ಹಸಿರೊಡಲಲಿ ಬೆಸೆದ ನಮ್ಮಬದುಕು,ಸುಂದರ ಕಾಣಾ.
ಹಸಿರ ಒಡಲಿನುಸಿರ ಹಿಂಡುವ ನೀಚ ಮನಗಳ ದಂಡು
ತಾನುಂಡು, ನೆರಳ ನೀಡುವ ಹಸಿರ ಬಸಿರನು ಕೊಂದು
ಮೆರೆವ ಮನುಜನ ಸ್ವಾರ್ಥ, ವಿಕೃತ ಮನಗಳ ಅನರ್ಥ
ಬದುಕು ನೀಡಿದ ವನಸಿರಿಯ ಬದುಕಿಂದು ಬರಡು.,
ಎಲೆ ಎಲೆಯ ಕಂಪನದಿ, ಸುಳಿವಗಾಳಿಯ ತಂಪಿನಲಿ
ಧರಣಿ ಹಸಿರ ಉಸಿರು ಉಳಿಯಲಿ,ಕಾಳಜಿ ಬೆಳೆಯಲಿ
ಹಸಿರು ಜೀವಗಳ ಉಸಿರು ಉಳಿಸುವ ಗುರಿಯೊಂದು
ನಮ್ಮ ಬದುಕ ನೆಲೆಯಾಗಿ ಸಾಗಲಿ ದಿಟ್ಟ ಹೆಜ್ಜೆಗಳ ಇಟ್ಟು..
-ಸಿದ್ದುಮೂರ್ತಿ
Comments
Post a Comment