ಕವಿತೆ
ಪರಾಧೀನ... ತಂಪೂಡಿ ರಮಿಸುವ ಬದಲು ಸುಡುವ ರಾತ್ರಿಗಳಲ್ಲಿ ಬೆಂದ ದಿನಗಳೇ ಹೆಚ್ಚು.. ಒಸರುವ ಪಸೆಯ ಹನಿಯೂ ತಣಿಸಲಿಲ್ಲ.. ತಬ್ಬಿದ ಕತ್ತಲೊಳಗೆ ಉಬ್ಬಿದ ಗಂಟಲ ತಂತುಗಳಿಂದ ಕಳಚಿದ ಮಾತು ಮೌನದ ಆಳದೊಳಗೆ. ಇಣುಕುವ ನೆಮ್ಮದಿಯ ಕೆಣಕಿ ಕಾಡುವ ಬೇಸರ ಬಿಳಲುಗಳಂತೆ.., ಇಳಿದು ಬೇರೂರುವ ಹುನ್ನಾರ.. ನೆರಳೇ ಉರಿವ ದಳ್ಳುರಿ ಕಾಳಜಿಯ ಕಾಯಿದೆಗಳು ಬಿಗಿದು ದೂಡಿದ ಹೂವ ಗಾದಿ ತೆರೆದು ತೋರಿದ ದಾರಿ ಸುರಿದ ಕತ್ತಲ ರಾಶಿ... ಉರಿವ ದೀಪ ಸುಡುವ ದೇಹ ಬೆಂದು ನೊಂದವರ ಪಾಡು. ನಿಸ್ತೇಜ ಕಂಗಳಲಿ ಕರಗಿದ ಕನಸುಗಳ ಜಾಡು.. ಹೊತ್ತು ಗೊತ್ತಿಲ್ಲದೆ ಎದುರಾಗಿಬಿಡುವ ಅಳಿವು ಉಳಿವಿನಾಟ ಸೋಲೊ ಗೆಲುವೊ ಇಳಿದ ಮೇಲೆ ನಡೆವ ಕಥೆ ನಿಗೂಢ. ನಂಬಿಕೆಯ ರೆಕ್ಕೆ ಬಿಚ್ಚಿ ಹಾರುವ ಸಂಭ್ರಮ.. ಗೂಡು ಸೇರುವ ಮುನ್ನ.. ಬಲಹೀನ.. ನಡುವಲಿನ ಬದುಕು ಪರಾಧೀನ.. ಬದುಕು ಪರಾಧೀನ.. ಸಿದ್ದು ಮೂರ್ತಿ,