ಕವಿತೆ
ಉಳಿಸುವುದು ಗೊತ್ತು.! ಅಳಿಸುವುದು ಗೊತ್ತು.!
----------------------------------------------------------------
ಉಸಿರ ನೀವ ಹಸಿರ ಒಡಲಿಗೆ
ಮೆಲು ತಂಗಾಳಿ ಬೀಸಿ
ರಮಿಸಿ ಮುದವ ತುಂಬುವುದು ಗೊತ್ತು..
ಮುನಿದರೆ ಬಿರುಗಾಳಿಯಂತೆ ಬೀರಿ
ಬೀಸಿ ಬಸಿದುಹಾಕುವ ರೌದ್ರದಷ್ಟು..!!
ಜುಳು ಜುಳು ಹರಿದು,ನೆಲವ ಹದ ಮಾಡಿ
ಕಾಳು ತೆನೆಗಟ್ಟಿ ತೂಗಿ ತೊನೆವಂತೆ
ಕರುಣೆ ತೋರಿ ಸಲಹುವದು ಗೊತ್ತು..
ತಾಳ್ಮೆ ಒಡೆದರೆ ರಭಸದಿ ಉಕ್ಕಿ
ಕೊಚ್ಚಿ ಹೋಗುವ ರಾಶಿ ರಾಶಿ
ನೆಲಸಮ ಗೊಳಿಸುವಷ್ಟು..!!
ನಿತ್ಯ ಏರುವ ಭಾರಗಳ ತಡೆದು
ಹೊತ್ತ ಒಡಲಿಗೆ ಸಹನೆಯೂ ಗೊತ್ತು..
ಸಹಿಸದೆ ಗುಡುಗಿ ನಡುಗಿದರೆ
ಸೀಳಿ ಗರ್ಭ ದೊಳಗೆ ಎಲ್ಲವ
ಹುದುಗಿಸಿಕೊಳ್ಳುವ ಕೋಪದಷ್ಟು!!
.
ಉರಿದು ಬೆಳಗುವ ಜ್ಯೋತಿ ಕತ್ತಲ ಅಳಿಸಿ
ಬೆಳಕ ಹರಡುವುದು ಗೊತ್ತು
ಕೆರಳಿ ಕಾರಿದರೆ
ಉರಿದು ಬೂದಿಯಾಗಿಸುವಷ್ಟು..!!
ನೆಲ ಜಲ ಗಾಳಿ
ಜೀವ ಸಂಕುಲಗಳ ಹುಟ್ಟಿಗೆ ನಾಂದಿ.
ನಡುವೆ ಬೆಸೆದ ಬದುಕು
ಬಿಡಿಸಲಾಗದ ಒಗಟು
ಅರಿತು ಆರಾಧಿಸಿದರೆ
ಸಲುಹಿ ಪೊರೆವ ತಾಯಿ
ಮಮತೆ ಎರೆವ ಕರುಣಾಮಯಿ..!!
ಮರೆತು ಬೀಗಿದರೆ..
ಮುನಿದು ಕಾಡಿಸುವ ಕಷ್ಟಗಳು
ಮುಂದೆ ವಿನಾಶೆದೆಡೆಗೆ ಸಾಗುವಷ್ಟು...!!!
ಸಿದ್ದು ಮೂರ್ತಿ
👌 sir
ReplyDeleteಧನ್ಯವಾದಗಳು 🙏
Delete