ಕವಿತೆ
ಉಳಿಗಾಲ ಮನುಜನಿಗಿಲ್ಲ..
******"**********
ಧರೆಯ ಬಳುವಳಿಗಳ
ಉಂಡು ಬೀಗಿದೆ..
ಬಾಗಿ ನಡೆಯದ ಬದುಕು
ತೀರದ ಋಣಗಳ ಹೊತ್ತು
ಮಣಿಯದ ಮೊಂಡುತನಕೆ
ಬುದ್ದಿಯ ಕೊಟ್ಟು..
ಸುಖದ ಸೊಕ್ಕಿನ ಸೆಲೆಯಲಿ
ಮಹಲಿನ ಸೂರಿನಡಿ
ಅಮಲಿನ ನಿದಿರೆಗೆ ಹಸಿರ
ತಂಪು ಗಾಳಿ ಹಿತವಾಗಿ,
ಹಸಿರ ಒಡಲು ಒಣಗಿದರೂ
ಕಿಡಕಿಯಾಗಿ ಮುಕ್ತ
ಬೆಳಕು, ಗಾಳಿಯ ನೀಡಿತ್ತು..
ಒಡಲ ಬಗೆದು ಕರುಳ ಮಾಲೆ ಧರಿಸಿ
ಕಡಲ ತಡಿಯ ಮುತ್ತ ಹೆಕ್ಕಿ.
ಬತ್ತದ ಆಸೆಯಲೆಗಳಿಗೆ
ಅಕ್ಷಯ, ಅನಂತ ಒಲುಮೆಯು
ಬಿತ್ತಿ ಬೆಳೆದು,ಹಸಿವ ತಣಿಸೆ
ಧಣಿವ ತಣಿಸುವ ಹನಿಗಳ,
ಒಡಲು ಕಡಲಿನ ಮಮತೆ ತಿಳಿಯಲೊಲ್ಲೇ.
ಧರಣಿಯ ಶುದ್ಧತೆಗೆ
ಮನದ ಮಲಿನಗಳ ಕದಡಿಬೆರೆತರು
ಅರಿವುಗೇಡಿತನ
ಹುಚ್ಚು ತನದ ಹೊಳೆಯಲಿ ತೇಲಿದೆ..
ಒಡಲ ಹಿಂಡಿ,ಬರಿದು ಮಾಡಲು.
ಹುದುಗಿದ ತಾಪ ಕುದಿದು
ಸ್ಪೋಟ ಗೊಂಡು ಬಿರಿದು ನಿಂತಿದೆ..
ಹದ್ದು ಮೀರಿದ ಉದ್ದಟತನ
ಬದ್ದತೆಯ ಹೊರತಾಗಿ
ಗದ್ದುಗೆಗೆ ಹೋರಾಟ ನಿಂತಿಲ್ಲ..
ಹೊತ್ತಿ ಉರಿದವು
ಒಳಗೊಳಗಿನ ಕಿಚ್ಚು
ಸುಟ್ಟು ನಲುಗುತ
ಕೆಟ್ಟಕಳೆಯ ಮಧ್ಯೆ
ಸತ್ವ ಸಾರ ಕಳೆದರೂ
ಅರಿವು ದಾರಿದೀಪವಾಗಿಲ್ಲ
ಧರೆಯ ಅವಕೃಪೆ ಎದುರಾಗಿ
ಕಬಳಿಸಲು ಎಚ್ಚರಿಕೆಯ ಗಡುವು
ಮರಳಿ ಮರಳುತ್ತಿದೆ..
ತಿದ್ದಿಕೊಳ್ಳದ ಹೊರತು
ಉಳಿಗಾಲ ಮನುಜನಿಗಿಲ್ಲ..
--ಸಿದ್ದುಮೂರ್ತಿ
Comments
Post a Comment